ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

 


ಎರಡನೆಯ ಬಾರಿಗೆ ಈ ಮಕ್ಕಳನ್ನು ರಸ್ತೆಯಲ್ಲಿ ಸಿಕ್ಕರು ಎನ್ನುವ ಕಾರಣಕ್ಕೆ ಪೋಲೀಸರು ತಂದು ನಿಲ್ಲಿಸಿದ್ದರು. ಕಂಕುಳಲ್ಲಿ ಒಣಗಿದ ಪಿಳ್ಳೆಯೊಂದನ್ನು ಎತ್ತಿಕೊಂಡು, ಸಿಂಬಳ ಸುರಿಸುತ್ತಾ ತಪ್ಪು ಹೆಜ್ಜೆ ಇಡುತ್ತಿದ್ದ ಇನ್ನೊಂದು ಮಗುವೊಂದನ್ನು ದರದರ ಎಳೆದುಕೊಂಡು ಅಳುತ್ತಾ ಬಂದು ನಿಂತಳು ತಾಯಿ. ಗಂಡನನ್ನು ಕರೆದುಕೊಂಡು ಬರಲು ತಾಕೀತು ಮಾಡಲಾಯಿತು. ಅದೇ ಸ್ಥಿತಿಯಲ್ಲಿ ಇಬ್ಬರೂ ಬಂದು ನಿಂತರು. ಹಿಂದಿನ ರಾತ್ರಿ ಅವನು ಮದ್ಯದಲ್ಲಿ ಮಿಂದೆದ್ದಿದ್ದ ಎನ್ನುವುದರಲ್ಲಿ ಅನುಮಾನವೇ ಇರಲಿಲ್ಲ. ಸಿಟ್ಟು ನೆತ್ತಿಗೇರಿತು. “ಸಾಕಲು ಯೋಗ್ಯತೆ ಇಲ್ಲದಿದ್ದ ಮೇಲೆ ಅದ್ಯಾಕೆ ಮಕ್ಕಳು ಮಾಡಿಕೊಳ್ಳುತ್ತೀರ? ಏನಮ್ಮ ನಿನಗೆ ನಾಚಿಕೆ ಆಗಲ್ಲ್ವಾ?” ಅಂತ ಜೋರು ದನಿ ಮಾಡಿದೆ. ಕೂಡಲೇ ಗೊಳೋ ಅಂತ ಅವಳ ದನಿ ನನ್ನದಕ್ಕಿಂತ ದುಪ್ಪಟ್ಟಾಯ್ತು. “ನಾಚಿಕೆ ಏನ್ ಮೇಡಂ ಜೀವನಾನೇ ಸಾಕಾಗಿದೆ. ಈ ಮಕ್ಕಳಿಗೆ ಅನ್ನಕ್ಕೆ ಒಂದು ದಾರಿ ಮಾಡಿ ಕೊಡಿ ನೀವು ಇವನನ್ನೂ ಬಿಟ್ಟು ಎಲ್ಲಾದರು ಹೋಗಿ, ದುಡ್ಕೊಂಡು ತಿನ್ನ್ಕೋತೀನಿ” ಎನ್ನುತ್ತಾ ಅಳು ಮುಂದುವರೆಸಿದಳು. ಆರು ವರ್ಷಗಳ ಹಿಂದೆ ಮದುವೆಯಾದವಳ ಗಂಡ ಕುಡುಕ. ಎರಡು ಹೆಣ್ಣು ಮಕ್ಕಳನ್ನು ಕೈಗಿತ್ತು ಅಪಘಾತದಲ್ಲಿ ಸತ್ತಿದ್ದ. “ಗಂಡು ದಿಕ್ಕಿಲ್ಲದೆ ಹೆಂಗೆ ಬಾಳ್ವೆ ಮಾಡೋದು ಮೇಡಂ” ಎಂದಳು. ಅದಕ್ಕೇ ಹೀಗೆ ಮುಂದೆ ನಿಂತಿದ್ದವನನ್ನು ಮದುವೆಯಾಗಿದ್ದಳು. “ ಇವನಿಗೆ ಅವರಪ್ಪ ಕೊಟ್ಟಿರೋ ಮನೆ ಇದೆ ಮೇಡಂ. ನೀನು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿ ಇರು ನಾನು ದುಡಿದು ತಂದು ಹಾಕುತ್ತೀನಿ ಅಂದಿದ್ದ” ಎಂದು ಮೂಗೊರೆಸಿಕೊಂಡಳು. “ಇವನಿಗೂ ಮಕ್ಕಳು ಬೇಕಲ್ಲ್ವಾ ಮೇಡಂ ಅದಕ್ಕೇ ಹೂಂ ಅಂತ ಇನ್ನೂ ಎರಡು ಮಕ್ಕಳಾಯ್ತು” ಎಂದು ಮತ್ತೊಂದು ಹೆಣ್ಣು ಮತ್ತು ಗಂಡು ಮಕ್ಕಳನ್ನು ಮುಂದೆ ಮಾಡಿದಳು. “ಇವನು ಡ್ರೈವಿಂಗ್ ಕೆಲಸ ಮಾಡುತ್ತಾನೆ ಮೇಡಂ. ಕುಡುಕ, ಅದಕ್ಕೆ ಅವನ ಅಕ್ಕ ಮನೆ ಕೊಡಲ್ಲ ಅಂತಿದ್ದಾರೆ. ಇವನು ಮನಸ್ಸಿಗೆ ಬಂದಾಗ ದಿನಸಿ ತಂದು ಕೊಡ್ತಾನೆ. ಅದಕ್ಕೆ ಇನ್ನೂ ಸಹಿಸಿಕೊಂಡು ಇದ್ದೀನಿ. ನನಗೂ ಸಾಕಾಗಿದೆ. ಮಕ್ಕಳ ಊಟಕ್ಕೆ ನೇರ ಆದರೆ ಇವನನ್ನು ಬಿಟ್ಟು ಹೊರಟು ಹೋಗ್ತೀನಿ ಮೇಡಂ” ಎಂದವಳ ಗಂಟಲು ಸಣ್ಣಗಾಗುವ ಸುಳಿವೇ ಇಲ್ಲ. “ನಾಚಿಕೆ ಆಗಲ್ಲ್ವಾ” ಎಂದು ಜೋರು ಮಾಡಿದ ನನ್ನ ದನಿ ಮಾರ್ದನಿಸುತ್ತಿತ್ತು. ಹೌದು, ತಿಂಗಳುಗಳಿಗೆ ಬೇಕಾದ ದಿನಸಿಯನ್ನು ಡಬ್ಬಿಯಲ್ಲಿ ತುಂಬಿಸಿಟ್ಟು ಹೊರಬರುವ ನನ್ನಂಥವರಿಗೆ ಆಡುವುದು ಅದೆಷ್ಟು ಸುಲಭ!

ಬಿಪಿಎಲ್ ಕಾರ್ಡ್ ಹೊಂದಿರುವ ಐವತ್ತು ಶೇಕಡ ಕುಟುಂಬಗಳ ಗಂಡಂದಿರು ಅಸಮರ್ಥ ತಂದೆಯರು. ಕುಡುಕರು. ಮತ್ತೊಬ್ಬಳನ್ನು ಕಟ್ಟಿಕೊಂಡವರು. ಹೆಂಗಸರನ್ನು ಬಡಿದು ಚಚ್ಚುವವರು. ಮರಿಗಳಿಗೆ ತುತ್ತೂಡುವುದರಲ್ಲಿ ಮನೆಯಾಕೆಯನ್ನು ಹೈರಾಣು ಮಾಡುವವರು. ತಾವು ತಂದು ಹಾಕದವರು, ಅವರುಗಳ ದುಡಿತದಲ್ಲಿ ಪಾಲು ಕಸಿದುಕೊಳ್ಳುವವರು. ಉದ್ಯೋಗ ಖಾತ್ರಿ ಇಲ್ಲದವರು. ಆರೋಗ್ಯಕ್ಕಾಗಿ ಊರೂರಿನ ಆಸ್ಪತ್ರೆಗಳ ಬಾಗಿಲು ಬಡಿದು ಸುಸ್ತಾಗುವವರು. ಸಂಸ್ಕೃತಿ, ಪದ್ಧತಿ ಹೆಸರಿನಲ್ಲಿ ಆಚರಣೆ ಬಿಡಲಾರದವರು. ಮೂಢನಂಬಿಕೆ ಕಳಚಿಕೊಳ್ಳದವರು. ಕುಟುಂಬದ ಇತರೆ ಸದಸ್ಯರ ವಿಶ್ವಾಸ ಕಳೆದುಕೊಂಡವರು. ಒಂದು ದುಡಿಮೆಯಲ್ಲಿ ಕನಿಷ್ಠ ಆರು ಬಾಯಿಗಳನ್ನು ತುಂಬಿಸಬೇಕಾದವರು. ಅವರೂ ಮನುಷ್ಯರು ಮತ್ತು ಇದೇ ದೇಶದವರು.

ಮತ್ತೊಬ್ಬಾಕೆ ಆಸ್ಪತ್ರೆಗಳಲ್ಲಿ ಸ್ವಚ್ಚತಾ ಸಿಬ್ಬಂದಿಯಾಗಿದ್ದವಳು. ನಾಲ್ಕು ಮಕ್ಕಳ ಸಂಸಾರ ತೂಗಿಸುತ್ತಿದ್ದವಳು. ನಾಲ್ಕಾರು ತಿಂಗಳಿಗೆ ಒಂದೇ ಊರಿನ ಪ್ರತೀ ಏರಿಯಾದಲ್ಲೂ ಮನೆ ಬದಲಿಸುತ್ತಿದ್ದಳು. ಕಾರಣ ಅವಳು ಮರ್ಯಾದೆಗೆ ಅಂಜುತ್ತಾಳೆ ಅವನು ಸಾರಾಯಿ ಕುಡಿದು ಮೃಗವಾಗುತ್ತಾನೆ. ಎಲ್ಲಿ ಮನೆ ಮಾಡಿದರೂ ಅವನ ಗಲಾಟೆ ತಡೆಯಲಾರದೆ ಮನೆಯ ಮಾಲೀಕ ಇವರುಗಳನ್ನು ಓಡಿಸುತ್ತಾನೆ. “ಅಂಗನವಾಡಿಗೆ ಯಾಕಮ್ಮ ಹಾಕಿಲ್ಲ ಮಕ್ಕಳನ್ನು?” ಎಂದು ಕೇಳಿದಾಗ “ತಿಂಗಳಿಗೊಂದ್ಸರ್ತಿ ಮನೆ ಬದಲು ಮಾಡಬೇಕಾದ ನನಗೆ ಯಾವ ಅಂಗನವಾಡಿ ಬೇಕೆಂದಾಗಲೆಲ್ಲಾ ಬಾಗಿಲು ತೆರೆಯುತ್ತದೆ” ಎನ್ನುವ ನೋಟ ಬೀರಿದಳು. ಕಾರಣಾಂತರದಿಂದ ಅಂಗನವಾಡಿಗೆ ಹಾಕಿರುವುದಿಲ್ಲ ಮಕ್ಕಳನ್ನು ಅಥವಾ ಹತ್ತಿರದ ಸರ್ಕಾರಿ ಶಾಲೆಗೆ ಹಾಕಿದ್ದರೂ ಒಂದು ಹೊತ್ತಿನ ಮಕ್ಕಳ ಊಟ ಕಳೆಯುತ್ತದೆ ಆದರೆ ಉಳಿದ ಎರಡು ಹೊತ್ತಿಗೆ ಅವಳೊಂದಿಗೆ ಮಕ್ಕಳಿಗೂ ಉಪವಾಸ. ಹಸಿದ ಹೊಟ್ಟೆಗೆ ಒಂದು ಮುಷ್ಠಿ ಅನ್ನ ಇಕ್ಕದೆ ’ತಲ್ಲಣಿಸದಿರು ಕಂಡ್ಯಾ ತಾಳು ಮನವೇ’ ಎಂದು ಹಾಡಾಗುವುದು ಮಾನವೀಯತೆಯೇ!

ಗೌರಮ್ಮನ ಗಂಡ ಬಿಟ್ಟು ಹೋಗಿ ವರ್ಷಾರಾಗಿತ್ತು. ಒಬ್ಬಳೇ ಮಗಳನ್ನು ಸಾಕಲು ಬೆಂಗಳೂರಿನ ಕಾರ್ಖಾನೆಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ಸೇರಿದ್ದರು. ಊರೊಳಗೆ ಮನೆ ಬಾಡಿಗೆ ಹೆಚ್ಚು ಎಂದು ಊರಾಚೆಯಲ್ಲೊಂದು ಶೀಟಿನ ಮನೆ ಭೋಗ್ಯಕ್ಕೆ ಹಾಕಿಕೊಂಡಿದ್ದರು. ತಾಯಿ ಮಗಳು ಬೆಳಿಗ್ಗೆ ಆರಕ್ಕೆ ಡಬ್ಬಿ ಕಟ್ಟಿಕೊಂಡು ಊರೊಳಗೆ ಸೇರಬೇಕೆಂದರೆ ಇಬ್ಬರಿಂದ ಬಸ್ ಚಾರ್ಜಿಗೆ ಅರವತ್ತು ರೂಪಾಯಿ ಕೊಡಬೇಕಿತ್ತು. ಆದರೆ ರಿಕ್ಷಾದವನು ಒಬ್ಬರಿಗೆ ಇಪ್ಪತ್ತು ರೂಪಾಯಿಯಂತೆ ದೊಂಬಿಯಲ್ಲಿ, ಗಂಡು ಹೆಣ್ಣುಗಳೆನ್ನದೆ ಹತ್ತು ಜನರನ್ನು ತುಂಬಿಕೊಂಡು ತಂದಿಳಿಸುತ್ತಿದ್ದ. ಇಪ್ಪತ್ತು ರೂಪಾಯಿ ಉಳಿಸಿಕೊಳ್ಳಲು ತಾಯಿ ಮತ್ತು ಹದಿಹರೆಯದ ಮಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಆ ಆಟೋರಿಕ್ಷಾದಲ್ಲಿ ಕುಡುಕರು, ಕೊರಮರು, ದುಶ್ಚಟಿಗಳು ಎಲ್ಲರೊಂದಿಗೂ ಅನಿವಾರ್ಯವಾಗಿ ಪ್ರಯಾಣ ಮಾಡುತ್ತಿದ್ದರು. ಅದೆಷ್ಟು ಮೆಟಡೋರ್ಗಳಲ್ಲಿ ನಿತ್ಯವೂ ಉದ್ಯೋಗದ ಜಾಗಕ್ಕೆ ಬರುವ ಹೆಂಗಸರ ಅಸಹಾಯಕ ಕಥೆ ಇದು. ಈ ಪಾಡುಗಳನ್ನು ಅನುಭವಿಸಿ ಹೆಂಗಸರು ಕಾರ್ಖಾನೆಗಳಿಗೆ ಬಂದು ದುಡಿದರೆ ಮಾತ್ರ ತೆರಿಗೆ ಕಟ್ಟುತ್ತೇನೆ ಎಂದು ಹೆಮ್ಮೆಯಿಂದ ಬೀಗುವ ಮಾಲೀಕ ಮೀಸೆ ತಿರುವಲು ಸಾಧ್ಯ.

ಸರ್ಕಾರಗಳು ಸಾರಿಗೆ ವ್ಯವಸ್ಥೆ ಮಾಡುಕೊಡುವುದು ಹೆಂಗಸರಿಗೆ ನೀಡಬೇಕಿರುವ ಸುರಕ್ಷತೆಯ ಕಡೆಗೆ, ಅವಳನ್ನು ಅತ್ಯಾಚಾರ ಅಧಮಾಚಾರಗಳಿಂದ ರಕ್ಷಿಸುವಲ್ಲಿ ಇಡಲೇ ಬೇಕಾದ ಮೊದಲ ಮತ್ತು ಅಂತಿಮ ಹೆಜ್ಜೆ. ಸರ್ಕಾರವೇ ಸಾರಿಗೆ ನೀಡಿ ಮಹಿಳೆಯರ ರಕ್ಷಣೆಗೆ ಮುಂದಾದರೆ ದೇಶದ ಆರ್ಥಿಕತೆಯ ಮೇಲೆ ಉತ್ತಮ ಪರಿಣಾಮ ಆಗುವುದು ಮಾತ್ರವಲ್ಲ ಖಾಸಗಿಯವರ ದುಂದು ದೌರ್ಜನ್ಯದ ಮೇಲೆ ಅನಾಯಾಸವಾಗಿ ಹಾಕುವ ಕಡಿವಾಣವೂ ಹೌದು. ತಮ್ಮದೇ ವಾಹನ ವ್ಯವಸ್ಥೆಯಲ್ಲಿ ಓಡಾಡುತ್ತಿರುವ ಹೆಂಗಸರು, ಸರ್ಕಾರ ಉಚಿತವಾಗಿ ಬಸ್ ನಡೆಸುತ್ತಿದೆ ಎಂದ ಮಾತ್ರಕ್ಕೆ ತಮ್ಮ ಜೀವನ ಶೈಲಿಯನ್ನು ಬದಲಾಯಿಸುವುದಿಲ್ಲ. ಹಾಗೊಂದು ವೇಳೆ ಬದಲಾವಣೆಯಾದರೂ ಅದರ ಪ್ರಮಾಣ ಅತ್ಯಲ್ಪ. ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದು ಎಂದರೆ ಐದು ವರ್ಷಕ್ಕೊಮ್ಮೆ ಸರ್ಕಾರ ಬದಲಿಸಿದಷ್ಟು ಸುಲಭವಲ್ಲ ಎನ್ನುವುದನ್ನು ರಾಜಕಾರಣಿಗಳೂ ಬಲ್ಲರು.

ಜಯಮ್ಮನವರು ಸಾಕಮ್ಮನವರಿಗೆ ಫೋನ್ ಮಾಡಿ “ನಾಳೆ ಮಡಿಕೇರಿಗೆ ಹೋಗಿ ಬರೋಣ ಬರ್ತೀರಾ” ಅಂದರಂತೆ. ಸಾಕಮ್ಮನವರು “ಯಾಕೆ” ಎಂದು ಕೇಳಿದಾಗ “ಏನಿಲ್ಲಾ ರೀ ತಲೆ ನೋಯ್ತಿದೆ, ಕಾಫಿ ಕುಡಿದು ಬರೋಣ” ಎಂದರಂತೆ ಜಯಮ್ಮ. “ಹಾಗೇ ಬರುವಾಗ ಚಿಕ್ಕಮಗಳೂರಿಗೆ ಹೋಗಿ ಅರ್ಧ ಕೇಜಿ ಕಾಫೀಪುಡಿ ತರೋಣ” ಎಂದರಂತೆ ಅಲ್ಲೇ ಇದ್ದ ಅವರ ಸ್ನೇಹಿತೆ ಕಮಲಮ್ಮ. ಸರ್ಕಾರ ಮಹಿಳೆಯರಿಗೆ ಬಸ್ಸುಗಳಲ್ಲಿ ದುಡ್ಡಿಲ್ಲದೆ ಪ್ರಯಾಣಿಸಲು ನೀಡುತ್ತಿರುವ ಸವಲತ್ತಿನ ಬಗ್ಗೆ ಲೇವಡಿ ಮಾಡಿದ ಈ ಜೋಕ್ ಒಂದಕ್ಕೆ ಎಲ್ಲರೂ ನಗುತ್ತಿದ್ದಾರೆ.

ದೇಶದ ಸಮಗ್ರ ಪ್ರಗತಿ ಎನ್ನುವುದರ ವ್ಯಾಖ್ಯಾನ ತಿಳಿದಿಲ್ಲದವರು, ತೆರಿಗೆಯನ್ನು ಯಾಕಾಗಿ ಮತ್ತು ಹೇಗೆಲ್ಲಾ ಬಳಸಿಕೊಳ್ಳಲಾಗುತ್ತದೆ ಎನ್ನುವುದರ ಬಗ್ಗೆ ಅರಿವಿಲ್ಲದವರು, ಸಹಬಾಳ್ವೆ ಎನ್ನುವ ಮನುಷ್ಯತನದ ಬಗ್ಗೆ ಉಡಾಫೆಯ ಭಾವ ಇರುವವರು ಮಾತ್ರ ಇಂತಹ ಯೋಜನೆಗಳನ್ನು ಅಪಹಾಸ್ಯ ಮಾಡಲು ಸಾಧ್ಯ. ತೆರಿಗೆ ಕಟ್ಟುವುದು ಈ ದೇಶದಲ್ಲಿ ದುಡಿದು ಹಣಗಳಿಸುತ್ತಿರುವ ಪ್ರತೀ ಪ್ರಜೆಯ ಜವಾಬ್ದಾರಿ. ಅದು ಸಮಾಜದ ಅಭಿವೃದ್ಧಿಗೆ ಬಳಕೆಯಾಗುತ್ತಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳುವ, ಸರ್ಕಾರವನ್ನು ಒತ್ತಾಯಪಡಿಸಿ ಅಂತಹ ಅನುಕೂಲವನ್ನು ಪಡೆದುಕೊಳ್ಳುವ ಅವಕಾಶವೂ ತೆರಿಗೆದಾರನಿಗೆ ಇದೆ. ಆದರೆ ಇಂತಿಂಥ ಯೋಜನೆಗಳಿಗೆ ತಾನು ಕಟ್ಟಿದ ತೆರಿಗೆಯನ್ನು ಬಳಸಬಾರದು ಎಂದು ಹೇಳುವ ಮೂರ್ಖತನದ ಆಯ್ಕೆ ಈ ಪ್ರಜಾಪ್ರಭುತ್ವದಲ್ಲಿ ಯಾರಿಗೂ ಇಲ್ಲ ಎನ್ನುವುದೇ ನೆಮ್ಮದಿಯ ವಿಷಯ.

ಶಾರದಮ್ಮನವರು ನಮ್ಮ ಮನೆಗೆ ಸಾರಿನಪುಡಿ ಹುಳಿಪುಡಿ ಮಾಡಿಕೊಡುತ್ತಿದ್ದವರು. ಅವರ ಗಂಡ ಶಂಕರನಾರಾಯಣ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು. ಅವರಿಗೆ ಇಬ್ಬರು ಮಕ್ಕಳು. ಜಾತಿಯಿಂದ ಸರ್ಕಾರದ ಯಾವ ಅನುದಾನಕ್ಕೂ ಒಳಪಡದವರು. ಕರೋನಾ ಸಮಯದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಎದೆನೋವಿನಿಂದ ಮಕ್ಕಳ ತಂದೆ ಮೂರುವಾರಗಳ ಕಾಲ ಆಸ್ಪತ್ರೆಯಲ್ಲಿದ್ದರು. ಅವರನ್ನು ಉಳಿಸಿಕೊಳ್ಳುವ ಬಾಬ್ತು ಸಾಲದ ಹೊರೆ ಹೆಚ್ಚಾಯ್ತು. ಆತನಿಗೆ ಕೆಲಸ ಹೋಯ್ತು. ಈಗ ತಾವು ದುಡಿದು ನಾಲ್ಕು ಜನರ ಕುಟುಂಬದ ಆಗುಹೋಗುಗಳನ್ನು ನೋಡಿಕೊಳ್ಳಬೇಕಾದ ಹೊಣೆ ಶಾರದಮ್ಮನವರದ್ದು. ಸಾಂಬಾರ ಪದಾರ್ಥಗಳನ್ನು ಮತ್ತೆ ಮಾಡಲು ಸಾಮಾಗ್ರಿಗಳನ್ನು ತರಲು ಅವರಿಗೆ ಕೆಲವೇ ಸಾವಿರ ರೂಪಾಯಿಗಳ ಅವಶ್ಯಕತೆ ಇತ್ತು. ಹೊಂದಿಸಲು ಸೋತುಹೋಗಿದ್ದರು. ಈಗ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಅರ್ಜಿ ಹಾಕಿದ್ದಾರೆ. ಸರ್ಕಾರದ ಮೂಟೇಯಲ್ಲಿ ಇರುವ ಈ ಕುಟುಂಬದ ಅಕ್ಕಿಯ ಪಾಲು ಇವರಿಗೆ ಸಿಕ್ಕರೆ ಇವರ ಮನೆಯೊಳಗೆ ನಿರಾಳತೆಯ ಗಾಳಿ ಬೀಸಲಿದೆ. ಬಸ್ಸಿನಲ್ಲಿ ಎಲ್ಲೆಡೆಯೂ ಹೋಗಿ ತಮ್ಮ ವ್ಯಾಪಾರ ಕುದುರಿಸಿಕೊಳ್ಳಲು ಬೆಂಬಲವಾಗುತ್ತದೆ. ಹಾಗೆಂದು ಇವರು ಸೋಮಾರಿಗಳಾಗಿ ಸರ್ಕಾರ ಕೊಡುವ ಅಕ್ಕಿ ತಿನ್ನುತ್ತಾ ಕೂರಲು ಸಾಧ್ಯವೇ?

ಇಂತಹ ಯೋಜನೆಗಳನ್ನು ಬಳಸಿಕೊಂಡು ಮಹಿಳೆಯರು ಗಟ್ಟಿಯಾಗಬೇಕು. ಕುಡುಕ ಮತ್ತು ದೌರ್ಜನ್ಯ ಮಾಡುವ ಗಂಡಂದಿರ ಎದುರು ಬಗ್ಗದೆ ಎದ್ದು ನಿಂತು ’ಮನುಷ್ಯರಂತೆ’ ಬದುಕಬೇಕು. ’ಕೋಟಿ ಕೊಟ್ಟರೂ ಅವಳು ಕೂತು ಉಣ್ಣಳು’ ಎನ್ನುವ ಮಾತನ್ನು ಸಾಬೀತು ಪಡಿಸಬೇಕು. ಸಹಬಾಳ್ವೆ ಎನ್ನುವುದಕ್ಕೆ ಹೊಸ ನಿರೂಪಣೆ ಕೊಟ್ಟು ’ನಾನು ನನ್ನೊಂದಿಗೆ ನೀನು’ ಎನ್ನುವ ಸೂತ್ರವನ್ನು ಸುಸೂತ್ರವಾಗುವಂತೆ ಮಾಡಬೇಕು.

ಸಾಮಾಜಿಕ ಭದ್ರತೆ ಮತ್ತು ಆಹಾರ ಭದ್ರತೆ ಪತೀ ಪ್ರಜೆಯ ಸಂವಿಧಾನಿಕ ಮತ್ತು ಮಾನವೀಯ ಹಕ್ಕು. ನೈತಿಕವಾಗಿ, ಕಾನೂನಿನ ಚೌಕಟ್ಟಿನೊಳಗೆ ಸ್ವಂತಬಲದ ಮೇಲೆ ಸಾಕಾರಗೊಳಿಸಿಕೊಳ್ಳಲು ಸಾಧ್ಯವಿಲ್ಲದವರ ಬೆಂಬಲಕ್ಕೆ ಬರುವುದು ಸರ್ಕಾರದ ಮೂಲಭೂತ ಕರ್ತವ್ಯ ಮತ್ತು ಅದನ್ನೇ ನಮ್ಮ ಸಂವಿಧಾನ ಹೇಳಿರುವುದು. ಇಂತಹ ಯೋಜನೆಗಳು ಬಿಟ್ಟಿಯೂ ಅಲ್ಲ ಭಾಗ್ಯವಂತೂ ಅಲ್ಲವೇ ಅಲ್ಲ. ಉಚಿತ ಎನ್ನುವುದು ತರವಲ್ಲ. ಇದು ನಮ್ಮ ಸಂವಿಧಾನ ದೇಶದ ಪ್ರಗತಿಗೆ ಮತ್ತು ಸಾಮರಸ್ಯಕ್ಕೆ ಹಾಕಿಕೊಟ್ಟಿರುವ ಬುನಾದಿ.

ಈಶ್ವರಿ ನಾಲ್ಕೈದು ಮನೆಗಳಲ್ಲಿ ಕೆಲಸ ಮಾಡುತ್ತಾಳೆ. ವಯಸ್ಸಿನ ಎರಡು ಮಕ್ಕಳಿಗೆ ವಿದ್ಯೆ ಹತ್ತಿಲ್ಲ. ಅಲ್ಲಿ ಇಲ್ಲಿ ಕೆಲಸ ಕೊಡಿಸಲು ಎಡಕಾಡುತ್ತಿದ್ದಾಳೆ. ಗಂಡ ಕುಡುಕ. ಸಿಟ್ಟು ಬಂದಾಗ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಎಲ್ಲಾ ದಾಖಲೆಗಳನ್ನು ಸುಟ್ಟು ಹಾಕಿದ್ದಾನೆ. ಒಂದೆರಡು ಬಾರಿ ಇವಳು ಊರಿನವರ ಸಹಾಯ ಪಡೆದು ನಕಲು ಪ್ರತಿ ಮಾಡಿಸಿಕೊಂಡಿದ್ದಾಳೆ. ಆದರೆ ಈಗ ಅದನ್ನೂ ಅವನು ಹಾಳುಗೆಡುವಿದ್ದಾನೆ. ಆ ದಾಖಲೆಗಳು ಲಿಂಕ್ ಆಗಿರುವ ಮೊಬೈಲ್ ಫೋನ್‍ನ ಸಿಮ್ ಕಾರ್ಡನ್ನು ಸುಟ್ಟಿದ್ದಾನೆ. ರೋಸಿಹೋದ ಇವಳು ಈಗ ಜೀವವನ್ನು ಹಿಡಿಯಾಗಿಸಿಕೊಂಡು ಅಕ್ಕಿ ಬೇಳೆಯನ್ನೂ ಎರವಲು ಪಡೆಯುತ್ತಿದ್ದಾಳೆ. ಸಿಕ್ಕರೆ ಸಿಕ್ಕೀತು ಇಲ್ಲವಾದಲ್ಲಿ ಕಣ್ಣೀರು ನುಂಗುತ್ತಾಳೆ. ಅಕ್ಕಿ ಮತ್ತು ಪೌಷ್ಟಿಕತೆಯನ್ನು ಕೊಡುವ ಮತ್ತು ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುವ ಯೋಜನೆಗಳು ಪಕ್ಷಾತೀತವಾಗಿ ಹಾಗೂ ಶಾಶ್ವತವಾಗಿ ಇರುವ ಯೋಜನೆಗಳಾಗಬೇಕು. ಇವುಗಳು ಚುನಾವಣಾ ಪ್ರಣಾಳಿಕೆಗಳ ವಿಷಯವೇ ಆಗಬಾರದು. ಬಡತನ ರೇಖೆ ಅಳಿಯುವ ಕನಸು ನನಸಾದರೂ ಜಾರಿಯಲ್ಲಿರಬೇಕಾದ ಇಂತಹ ಯೋಜನೆಗಳು ದೇಶದಲ್ಲಿನ ಸುಭೀಕ್ಷತೆಯ ಕುರುಹು. ಕೆಲವು ಮುಂದುವರೆದ ದೇಶಗಳಲ್ಲಿ ಇಂತಹ ಯೋಜನೆಗಳು ವರ್ಗಬೇಧವಿಲ್ಲದೆ ಜಾರಿಗೆಯಲ್ಲಿ ಇರುವ ಆಯ್ಕೆಗಳಾಗಿವೆ. ಅಲ್ಲದೆ ಗುಣಮಟ್ಟದ ಪದಾರ್ಥಗಳನ್ನು ಒದಗಿಸಬೇಕು ಎನ್ನುವ ಹೊಣೆ ಸರ್ಕಾರವನ್ನು ಸದಾ ಕಾಲವೂ ಗಮನಪೂರ್ವಕವಾಗಿ ಇರುವಂತೆ ಮಾಡುತ್ತದೆ.

ಇದೀಗತಾನೆ ಆಡಳಿತಕ್ಕೆ ಬಂದಿರುವ ಸರ್ಕಾರ ಇದನ್ನು ಪ್ರತಿಯೊಬ್ಬ ಶಾಸಕನೂ ತನ್ನ ಮನೆಯಿಂದ ತಂದುಕೊಡುತ್ತಿರುವ ದಾನ ಎನ್ನುವಂತೆ ಬಿಂಬಿಸಿ, ವೈಭವೀಕರಿಸುತ್ತಿರುವುದು ಎಷ್ಟು ಲಜ್ಜೆಗೇಡಿತನವೋ, ಇಂತಹ ಯೋಜನೆಗಳನ್ನು ಬೇಡ ಎನ್ನುತ್ತಿರುವ ಹೆಸರಿಗೆ ಮಾತ್ರ ಇರುವ ವಿರೋಧಪಕ್ಷದ್ದೂ ಅಷ್ಟೇ ನಾಚಿಕೆ ಹೀನ ನಡೆ. ಸಂಬಂಧಪಟ್ಟ ಎಲ್ಲಾ ಸಚಿವಾಲಯಗಳ ಸಮನ್ವಯತೆಯಿಂದ ಅವಶ್ಯಕತೆ ಇರುವವರು ದಾಖಲೆಗಳನ್ನು ಮಾಡಿಸಿಕೊಳ್ಳಲು ತ್ವರಿತಗತಿಯಲ್ಲಿ ಪ್ರಕ್ರಿಯೆಯನ್ನು ಸರ್ಕಾರ ಆಗಿಸಿಕೊಡಬೇಕು. ಪಡೆದುಕೊಳ್ಳುವವರಿಗೆ ’ಹಂಗಿನ ಅನ್ನ’ ಎನ್ನುವ ಭಾವನೆ ಬರದಂತೆ, ನೀಡುವವರಿಗೆ ’ಯಜಮಾನ್ಯ’ ಎನ್ನುವ ಅಹಂ ಇರದಂತೆ ಕೆಲಸ ಮಾಡಬೇಕಿರುವುದು ಸರ್ಕಾರದ ಆದ್ಯತೆ ಆಗಿರಬೇಕು.

ಗಾಂಧಿಬಝಾರಿನಲ್ಲಿ ಹಳೇ ಸೊಪ್ಪಾಕೆ ಒಬ್ಬಳಿದ್ದಾಳೆ. “ಇನ್ನೇನು ಅಕ್ಕಿ ಫ್ರೀ ಬರತ್ತೆ, ಬಸ್ ಫ್ರೀ ಆಗತ್ತೆ ಮತ್ತ್ಯಾಕೆ ಬಿಸಿಲು ಮಳೆಯಲ್ಲಿ ಸೊಪ್ಪು ಮಾರುತ್ತೀಯ” ಎಂದಿದ್ದಕ್ಕೆ “ಆ ಅಕ್ಕಿ ತಕ ಬಂದು ಉಪ್ಪು ಕಾರಕ್ಕೆ ನಿನ್ ಮನೇಗ್ ಬರ್ಲಾ” ಎಂದು ಕಿಸಕ್ಕಿದಳು. ಸ್ವಿಗ್ಗಿ ಡೆಲಿವರಿ ಮಾಡಲು ಬಂದ ಜಯಂತಿಯನ್ನು “ಯಾಕ್ರೀ ಕಷ್ಟ ಪಡ್ತೀರ ಅಕ್ಕಿ ಫ್ರೀ ಬರತ್ತಲ್ಲ” ಎಂದು ರೇಗಿಸಿದೆ. ಅದಕ್ಕವಳು “ಮೇಡಂ ಮುಂದಿನ ವರ್ಷ ಪಾರ್ಲಿಮೆಂಟ್ ಎಲೆಕ್ಷನ್ ಆದಮೇಲೆ ಊಟ ನೀವೇ ಹಾಕಬೇಕು ಹಾಗಾದ್ರೆ” ಎಂದಳು. ಅಬ್ಬಾ, ಈ ದೇಶದ ಸಾಮಾನ್ಯ ಪ್ರಜೆಗೂ ರಾಜಕಾರಣಿಗಳ ಬದಲಾಗುವ ಬಣ್ಣದ ಪರಿಚಯವಿದೆ ಹಾಗೆಯೇ ಇಂತಹ ಯೋಜನೆಗಳ ಅವಶ್ಯಕತೆಯೂ ಬಲ್ಲವರಾಗಿದ್ದಾರೆ. “ಅಕ್ಕಿಯನ್ನು ತೆಗೆದುಕೊಂಡು ಹೋಗಿ ಮಾರಿಕೊಳ್ಳುತ್ತಾರೆ” ಎಂದು ಬೊಬ್ಬಿಡುವವರಿಗಾಗಿ ಉತ್ತರವಾಗುತ್ತಾಳೆ ಅಫ್ಸಾನ. ಈಕೆ ಪ್ಯಾಕೇಜ್ ಕಾರ್ಖಾನೆಯಲ್ಲಿ ಕೆಲಸದಲ್ಲಿ ಇದ್ದಾಳೆ. ತನ್ನದು ಹಾಗೂ ನಾದಿನಿಯ ರೇಷನ್ ಕಾರ್ಡಿನಲ್ಲಿ ಮನೆಗೆ ಸಾಕಾಗಿ ಮಿಗುವಷ್ಟು ಅಕ್ಕಿ ಸಿಗತ್ತೆ ಅವಳಿಗೆ. ನಾಲ್ಕು ಮನೆ ದೂರದಲ್ಲಿ ತಮ್ಮ ಇಪ್ಪತ್ತು ವರ್ಷದ ಅಂಗವಿಕಲ ಮಗನನ್ನು ನೋಡಿಕೊಂಡು ಕೂಡಿಟ್ಟ ದುಡ್ಡಿನಲ್ಲೇ ಜೀವನ ಮುಂದು ಹಾಕುತ್ತಿರುವ ಸಾವಿತ್ರಮ್ಮನಿಗೆ ಮಾರುತ್ತಾಳೆ. ಆ ದುಡ್ಡಿನಿಂದ ಬಾಕೀ ಖರ್ಚು ನಿಭಾಯಿಸುತ್ತಾಳೆ. “ಹಸಿದವರು ಧರ್ಮಕ್ಕೆ ಸಿಕ್ಕರೂ ಆಹಾರವನ್ನು ಬಚ್ಚಲಿಗೆ ಸುರಿಯರು ದೀದಿ” ಎನ್ನುತ್ತಾಳೆ ಅಫ್ಸಾನ.

ಇವತ್ತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಬಸ್ಸಿನಲ್ಲಿ ಮಹಿಳೆಯರಿಗೆ ಹಣರಹಿತ, ಸರಾಗ ಪ್ರಯಾಣಕ್ಕೆ ನಾಂದಿ ಹಾಡಲಿದ್ದಾರೆ. ಬೇಗಬೇಗ ಉಳಿದ ರೀತಿಯ ಭದ್ರತೆಗಳನ್ನೂ ಹೆಂಗಸರಿಗೆ ಒದಗಿಸಿಕೊಡಲಿ. ಪ್ರತೀ ಮಹಿಳೆಯೂ ’ರೈಯ್ಯ ರೈಯ್ಯಾ’ ಎನ್ನುತ್ತಾ ನೆಮ್ಮದಿಯಿಂದ ಘನತೆಯುಕ್ತ ಬದುಕಿನ ಬಸ್ ಅನ್ನು ಹಸನ್ಮುಖತೆಯಿಂದ ಓಡಿಸುವಂತೆ ಆಗಲಿ. ಪ್ರತಿ ಮನೆಯಲ್ಲೂ ಹೊಟ್ಟೆ ತುಂಬಲಿ. ಈ ದೇಶ ದಷ್ಟಪುಷ್ಟವಾಗಿ ನಳನಳಸಲಿ


********************



Comments

  1. ತುಂಬಾ ಒಳ್ಳೆ ಸಂದೇಶ ಅಮ್ಮ🫶🫶🫶🫶🫶🫶🫶💕💐🙏🏻

    ReplyDelete
  2. ಸಮಯೋಚಿತ ಬರಹ.‌ ಮಹಿಳೆಯರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಮತ್ತು ಅದನ್ನು ಅರ್ಹರಿಗೆ ಸಮಯಕ್ಕೆ ಸರಿಯಾಗಿ ತಲುಪಿಸುವ ವ್ಯವಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಆದ ದಿನವೇ ದಷ್ಟಪುಷ್ಟ ದೇಶದ ಕನಸು ಕಾಣುವೆ.

    - ಶಮ ನಂದಿಬೆಟ್ಟ

    ReplyDelete
  3. ವಾಸ್ತವತೆಯ ಸರಿಯಾದ ಚಿತ್ರಣ,ಎಲ್ಲರಿಗೂ ತಿಳಿಯಬೇಕು!👌

    ReplyDelete

Post a Comment

Popular posts from this blog

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್