Police Notice in ಪ್ರಜಾವಾಣಿ
ಎರಡೂ ಕುಟುಂಬಗಳ ಒಪ್ಪಿಗೆ ಇಲ್ಲದೆ ಪ್ರೀತಿಸಿ ಮದುವೆಯಾಗಿದ್ದ ಪೂಜಾಳಿಗೆ ವರ್ಷದಲ್ಲೇ ತಿಳಿಯಿತು ಗಂಡ ಮಹಾನ್ ಸೋಮಾರಿಯೆಂದು. ತನ್ನ ವಿದ್ಯೆಯೂ ಎರಡನೆಯ ಪಿಯುಸಿಯಷ್ಟೇ. ಯಾರ ಬೆಂಬಲವೂ ಇಲ್ಲದೆ ಎಲ್ಲಿಂದಲೋ ಸಾಲ ತಂದು ಬಾಡಿಗೆ ಮನೆಯ ಕೋಣೆಯಲ್ಲಿಯೇ ಬ್ಯೂಟಿ ಪಾರ್ಲರ್ ತೆರೆದುಕೊಂಡು ಸಂಸಾರ ಸಾಕುತ್ತಿದ್ದಳು. ಇನ್ನು ಮೂರು ದಿನದಲ್ಲಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಬರಬೇಕು ಎನ್ನುವ ಫೋನ್ ಕರೆ ಬಂದಾಗ, ವಿವರ ಕೇಳಿದರೂ ಸಿಗದಿದ್ದಾಗ ಕಂಗಾಲಾಗಿ ಹೋದಳು.
ಶ್ರೀಮತಿ ಮನೆಯಲ್ಲಿಯೇ ಸೀರೆ ವ್ಯಾಪಾರ ಮಾಡುತ್ತಿದ್ದಳು. ಹೋಲ್ಸೇಲ್ ದರದಲ್ಲಿ ಸೀರೆ ಸಪ್ಲೈ ಮಾಡುತ್ತಿದ್ದ ಮಾರಾಟಗಾರನಿಗೂ ಈಕೆಗೂ ಹಣಕಾಸಿನ ವಿಷಯಕ್ಕೆ ವಾಗ್ವಾದವಾಗಿತ್ತು. ಅದಾದೊಂದೇ ವಾರದಲ್ಲಿ ಆತನ ಊರಿನ ಪೊಲೀಸ್ ಠಾಣೆಯಿಂದ ’ನಿಮ್ಮ ಮೇಲೆ ಎಫ್ಐಆರ್ ಆಗಿದೆ ನೀವು ಠಾಣೆಗೆ ಹಾಜರಾಗಬೇಕು’ ಎಂದಷ್ಟೇ ಇದ್ದ ಪತ್ರವೊಂದು ಕೈಸೇರಿದಾಗ ಗಂಡ, ಅತ್ತೆ, ಮಾವ ಎಲ್ಲರೂ ಇವಳನ್ನೇ ನಿಂದಿಸಿ ಮತ್ತಷ್ಟು ಗಾಬರಿ, ಆತಂಕ ಒಡ್ಡಿದ್ದರು.
ಹೀಗೆ ಅವರುಗಳು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿರಬಹುದು, ಕಷ್ಟದಲ್ಲಿ ಕೈಸಾಲ ತೆಗೆದುಕೊಂಡಿರಬಹುದು, ಯಾರದ್ದೋ ಕಷ್ಟಕ್ಕೆ ಜಾಮೀನು ನಿಂತಿರಬಹುದು, ಮತ್ತ್ಯಾರದ್ದೋ ಬ್ಯಾಂಕ್ ಸಾಲಕ್ಕೆ ಶ್ಯೂರಿಟಿ ಹಾಕಿರಬಹುದು, ಅವರಿವರ ಜಗಳ ಬಿಡಿಸಲು, ರಾಜಿ ನ್ಯಾಯ ಮಾಡಲು ಹೋಗಿದ್ದಿರಬಹುದು, ಆಸ್ತಿ ಕೊಳ್ಳುವಿಕೆಯ ವಿಷಯವೇ ಇರಬಹುದು, ಕುಟುಂಬದ ಆಸ್ತಿ ಪಾಲುದಾರಿಕೆಯ ವಿಷಯವೂ ಆಗಬಹುದು, ಕಾರಣಾಂತರಗಳಿಂದ ಕೊಟ್ಟ ಚೆಕ್ ಬೌನ್ಸ್ ಆಗಿರುವಾಗ, ಕೊಟ್ಟ ಸಾಲವನ್ನು ಹಿಂದಿರುಗಿ ಕೇಳಿರುವಾಗ, ಸಾಲ ತೀರಿಸಲು ಆಗದೆಯಿದ್ದಾಗ, ಉದ್ಯೋಗಸ್ಥ ಸ್ಥಳದಲ್ಲಿಯೋ ಮನೆ ಮಾಲೀಕರ ಜೊತೆಯಲ್ಲಿಯೋ ನಡೆದ ಜಗಳ ಇರಬಹುದು, ಗಾಡಿ ಓಡಿಸುತ್ತಿರುವಾಗ ರಸ್ತೆಯಲ್ಲಿ ಅಡ್ಡ ಬಂದವರ ಜೊತೆಗಾದ ವಾದದ ಕಾರಣವೇ ಇರಬಹುದು, ಯಾವುದೇ ವಿಷಯದಲ್ಲಿ ಒಬ್ಬ ವ್ಯಕ್ತಿಯ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದಾಗ ಆ ವ್ಯಕ್ತಿಯನ್ನು ಆರೋಪಿ ಎಂದು ಪರಿಗಣಿಸಿ ಅಥವಾ ಪರಿಗಣಿಸುವ ಮುನ್ನ ಅಥವಾ ಯಾವುದೇ ಪ್ರಕರಣದಲ್ಲಿ ಆ ವ್ಯಕ್ತಿ ಸಾಕ್ಷಿ ಆಗಬಹುದು ಎಂದು ಪೋಲೀಸರಿಗೆ ಮನವರಿಕೆ ಆದಾಗ ಅಂತಹ ವ್ಯಕ್ತಿಯನ್ನು ವಿಚಾರಣೆ ನಡೆಸುವ, ವಿವರ ಪಡೆದುಕೊಳ್ಳುವ ಅಧಿಕಾರವನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, 2023 ಇದರ ಸೆಕ್ಷನ್ 35ರ ಅಡಿಯಲ್ಲಿ ಪೊಲೀಸರಿಗೆ ನೀಡಲಾಗಿದೆ. ಹಾಗೆ ಪ್ರಕರಣದಲ್ಲಿ ಯಾವುದೇ ಕಾರಣಕ್ಕೆ ಅವಶ್ಯಕ ಇರುವ ವ್ಯಕ್ತಿಯನ್ನು ಒಂದು ಫೋನ್ ಕರೆಯ ಮೂಲಕ, ವಾಟ್ಸ್ಯಾಪ್ ಸಂದೇಶ, ಈಮೇಲ್ ಮೂಲಕ ಅಥವ ಪತ್ರ ಮುಖೇನ ಠಾಣೆಗೆ ವಿಚಾರಣೆಗಾಗಿ ಬರಬೇಕು ಎಂದು ಹೇಳುವಾಗ ಸಂಪೂರ್ಣ ವಿವರಣೆ ನೀಡದಿದ್ದರೆ ಕರೆ ಬಂದ ವ್ಯಕ್ತಿಯು ಹಾಗೆ ಠಾಣೆಗೆ ಹೋಗುವುದನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಬಹುದು.
ವಿದ್ಯಾವಂತ ಹೆಂಗಸರೂ ಕೂಡ ಪೊಲೀಸ್ ಎಂದರೆ ಹೆದರುವ ಕಾಲ ಇನ್ನೂ ಇರುವಾಗ ಇಂತಹ ಅಪೂರ್ಣ ಮಾಹಿತಿಯ ಸಂವಹನ ಪೊಲೀಸರಿಂದ ಬಂದಾಗ ಆಕೆಯ ಮನೆಯವರೇ ಅವಳ ಮೇಲೆ ಅನುಮಾನ ಪಟ್ಟು ನಿಂದಿಸುವ ಸಾಧ್ಯತೆಯೇ ಹೆಚ್ಚು. ಇನ್ನು ಮುಂದೆ ಇಂತಹ ಅರ್ಧಂಬರ್ಧ ಮಾಹಿತಿ ಇರುವ ಪೊಲೀಸ್ ಪತ್ರ, ಕರೆ ಬಂದರೆ ಹೆದರುವ ಅವಶ್ಯಕೆ ಇಲ್ಲ. ರಿಟ್ ದಾವೆ 15125/2024 ಇದರ ವಿಚಾರಣೆಯ ಸಂದರ್ಭದಲ್ಲಿ 19 ಜುಲೈ 2024ರಂದು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಂ.ನಾಗಪ್ರಸನ್ನ ಅವರು ನೀಡಿರುವ ಆದೇಶದನ್ವಯ ಇನ್ನು ಮುಂದೆ ಯಾವುದೇ ಮಾಧ್ಯಮದ ಮೂಲಕ ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೆ ಕರೆಯುವಾಗ ಯಾವ ಕಾರಣಕ್ಕಾಗಿ, ಯಾವ ಆರೋಪದ ಮೇರೆಗೆ ಅಥವಾ ಸಾಕ್ಷಿದಾರರಾಗಿ ಕರೆಯಲಾಗುತ್ತಿದೆ ಮತ್ತು ಆ ಘಟನೆ ಎಂದು ಎಲ್ಲಿ ನಡೆದಿದೆ, ದೂರುದಾರರು ಯಾರು, ಎಫ್ಐಆರ್ ಸಂಖ್ಯೆ ಮತ್ತು ದಿನಾಂಕ ಯಾವುದು, ಯಾವ ವ್ಯಾಪ್ತಿ ಪ್ರದೇಶದ ಠಾಣೆಯಲ್ಲಿ ದಾಖಲಾಗಿದೆ ಅದರ ವಿಳಾಸ ಏನು ಎನ್ನುವ ವಿವರಗಳನ್ನು ವ್ಯಕ್ತಿಗೆ ಒದಗಿಸಿಕೊಡಬೇಕು. ಅಫ್ಐಆರ್ ಪ್ರತಿಯನ್ನೂ ನೀಡಬೇಕು. ’ಪೊಲೀಸ್ ಠಾಣೆಗೆ ಹೋಗುವುದು ಎಂದರೆ ಯಾವುದೇ ವ್ಯಕ್ತಿಗೆ ಸಂತೋಷಕೂಟದ ಸ್ಥಳಕ್ಕೆ ಹೋದಂತೆ ಅಲ್ಲ. ಎಲ್ಲಾ ವಿವರಗಳಿಲ್ಲದಿದ್ದರೆ ಆ ವ್ಯಕ್ತಿಯು ಪೊಲೀಸರ ಆದೇಶವನ್ನು ಪಾಲಿಸಬೇಕು ಎನ್ನುವಂತಿಲ್ಲ ಮತ್ತು ಹಾಗೆ ನಿರ್ಲಕ್ಷಿಸಿದರೆ ಅದು ಅಪರಾಧವಲ್ಲ’ ಎಂದಿದ್ದಾರೆ ನ್ಯಾಯಾಧೀಶರು. ಸ್ಪಷ್ಟವಾದ ವಿವರಗಳನ್ನು ಹೊಂದಿರುವಂತಹ ನಮೂನೆಯನ್ನು ರಾಜ್ಯ ಸರ್ಕಾರವು ತುರ್ತಾಗಿ ಪೊಲೀಸ್ ವಿಭಾಗಕ್ಕೆ ದೊರಕಿಸಿಕೊಡಬೇಕು ಎಂದೂ ಆದೇಶಿಸಲಾಗಿದೆ. ವಿವರಗಳು ಇದ್ದಾಗ್ಯೂ ಅಂತಹ ನೋಟೀಸನ್ನು ಕಡೆಗಣಿಸಿದರೆ ಪೊಲೀಸರು ಆ ವ್ಯಕ್ತಿಯನ್ನು ಬಂಧಿಸುವ ಸಾಧ್ಯತೆಯೂ ಇರುತ್ತದೆ.
ಇಷ್ಟೆಲ್ಲಾ ಮಾಹಿತಿ ಇರುವಾಗ ಮಹಿಳೆಯರು ಪೊಲೀಸರು ಎಂದರೆ ಅನಾವಶ್ಯಕವಾಗಿ ಹೆದರದೆ ಅವರಿಂದ ತಮಗೆ ಬೇಕಾದ ವಿವರಗಳನ್ನು ಪಡೆದು ಗೊಂದಲವನ್ನು ಬಗೆಹರಿಸಿಕೊಳ್ಳಬೇಕು. ಯಾವುದೇ ಪ್ರಕರಣವನ್ನು ಪರಿಹರಿಸಿಕೊಳ್ಳಲು ಮುಂದಾಗದಿದ್ದರೆ ಅದು ಎಂದೂ ನೆತ್ತಿಯ ಮೇಲಿನ ತೂಗುಗತ್ತಿಯಂತೆಯೇ ಸರಿ.
*******************
ಅಂಜಲಿ ರಾಮಣ್ಣ
ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು
ಇಂತಹ ಉಪಯುಕ್ತ ಮಾಹಿತಿಯನ್ನು ನೀಡಿದಕ್ಕಾಗಿ ಧನ್ಯವಾದಗಳು
ReplyDeleteGood & useful information
ReplyDeleteಉಪಯುಕ್ತ ಮಾಹಿತಿ.
ReplyDelete