11th April 2019
ಒಬ್ಬಳು ಹುಡುಗಿ. ಹದಿಹರೆಯ ಪ್ರೀತಿಯಲ್ಲಿ ಬಿದ್ದಳು. ಅವರಿಬ್ಬರೂ ಮದುವೆಯಾದರು. ಕೂಡಲೇ ಬಸುರಿಯಾದ ಹುಡುಗಿ ಪೊಲೀಸರ ಭಯದಿಂದ ಕಣ್ಣುತಪ್ಪಿಸುವ ಆಟದಲ್ಲಿ ಮತ್ತೊಂದು ರಾಜ್ಯದಲ್ಲಿ ಒಬ್ಬಳೇ ಬಂದು ನಿಂತಳು . 18 ವರ್ಷದ ಒಳಗಿನವಳು ತುಂಬು ಗರ್ಭಿಣಿ ಸರ್ಕಾರದ ಆಶ್ರಯಕ್ಕೆ ಬಂದಳು ಮಗುವಿಗೆ ಈಗ ಮೂರು ತಿಂಗಳು. ಇವಳನ್ನು ಹುಡುಕಿ ಪತ್ತೆ ಹಚ್ಚಿದ ಹುಡುಗ ಮತ್ತದೇ ಪೊಲೀಸ್ ಹೆದರಿಕೆಗೆ ಅವಳಿರುವಲ್ಲಿಗೆ ಬರುತ್ತಿಲ್ಲ. ಆದರೆ ಹುಡುಗಿ ಮತ್ತವರ ಮಗುವನ್ನು ಕರೆಯುತ್ತಿದ್ದಾನೆ.

ಕಾನೂನಿನ ಪ್ರಕಾರ ಅವಳೀಗ ಈ ರಾಜ್ಯದ ಮಗಳು. 18 ತುಂಬದವಳನ್ನು ಅವಳ ರಾಜ್ಯದ ಮಗಳು ಮಾಡಬೇಕೆ ಹೊರತು ಸೊಸೆಯನ್ನಾಗಿಸಿ ಕಳುಹಿಸಿಕೊಡಲು ಸಾಧ್ಯವಿಲ್ಲ. ಇದಕ್ಕೆ ಸರ್ಕಾರದ ಕೆಲವು ನಿರ್ದಿಷ್ಟ  ಪ್ರಕ್ರಿಯೆ ಇದೆ ಮತ್ತು ಅದಕ್ಕೆ ನಿಗಧಿತ ಸಮಯವೂ ಇದೆ. ಹಾಗಾಗಿ ಕಾಯಲೇ ಬೇಕು.

ಅಲ್ಲಿಯವರೆಗೂ ಆ ಮಗು ಮತ್ತದರ ಅಮ್ಮ ಕೌಟುಂಬಿಕ ಪರಿಸರದಿಂದ ವಂಚಿತರೇ. ಹಾಲ್ಕರೆಯ ತುಟಿಗಳ ಅ ಕೂಸಿನ ಎದುರು ಕುಳಿತು ಯೋಚಿಸುತ್ತೇನೆ “ನಿನ್ನ ಅಮ್ಮನಿಗೆ ಸ್ವಲ್ಪ ತಿಳುವಳಿಕೆ ಒಂದಿಷ್ಟು ಆತ್ಮವಿಶ್ವಾಸ ಇನ್ನೊಂದಿಷ್ಟು ಅಕ್ಷರ ಜ್ಞಾನ ಇದ್ದಿದ್ದರೆ ಕಂದ ನೀ ಕೂಡ ಸರಿಯಾದ ಸಮಯಕ್ಕೆ  ಭೂಮಿಗೆ ಬರುತ್ತಿದ್ದೆ ಮತ್ತು ಎತ್ತಾಡಿಸುವ ನಿನ್ನವರೊಡನೆಯೇ ಇರುತ್ತಿದ್ದೆ” ಎಂದು.

ಗತ್ಯಂತರವಿಲ್ಲ ಮಗುವಿಗೆ ಮಗುವಾಗಿಯೇ ಉಳಿಯದೆ. ಆದರೆ ಮಗುವಿನ ಅಮ್ಮನಿಗೂ ಎಲ್ಲಾ ರೀತಿಯಿಂದಲೂ ಅಮ್ಮನಾಗುವ  ಸಾಮರ್ಥ್ಯ ಇರುವ ವಯಸ್ಕಳಾಗಿ ಅವರಿಬ್ಬರ ಹಕ್ಕು ಎನ್ನಲಾಗುದ್ದನ್ನು ಅವರಿಬ್ಬರಿಗೆ ಒದಗಿಸಿಕೊಡುವುದು ಕರ್ತವ್ಯ ತಾನೇ ಎಂದು ನಿರ್ಧರಿಸಿ ಮುಂದಡಿಯಿಡುತ್ತೇನೆ.

ಅವನೊಬ್ಬ ಚಿಕ್ಕ ಹುಡುಗ ಅವಳೂ ಚಿಕ್ಕವಳೇ . ಇಬ್ಬರದ್ದೂ ಪ್ರೀತಿಯ ಅಮಲಿನಲ್ಲಿ ತೇಲುವ ವಯಸ್ಸು. ಅವನಿಗೆ ಮುಂದಡಿ ಇಡಲು ಭಯ. ಇವಳು ಬಲು ಚುರುಕಿನವಳು ಜೊತೆಗೆ ಹಠವೂ ಸೇರಿತ್ತು. ಓಡಿ ಹೋಗೋಣ ಎನ್ನುವ ಅವಳ ಮಾತಿಗೆ  ಯಾವ ರೀತಿಯಲ್ಲೂ ಒಪ್ಪದವನನ್ನು “ ನೀನು  ನನ್ನ ಜೊತೆ ಬರದಿದ್ದರೆ ನಿನ್ನ ಹೆಸರು ಬರೆದಿತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಕಣ್ಣೀರಾಗಿದ್ದಾಳೆ.

ಹುಡುಗ ಕಂಗಾಲಾದ. ಇಬ್ಬರು ಒಂದು ದಿನ ಮನೆ ಬಿಟ್ಟರು . ದೇವಸ್ಥಾನಗಳಲ್ಲಿ ಹಗಲು ದೂಡುತ್ತಾ ಬಸ್ಗಳಲ್ಲಿ ರಾತ್ರಿ ಕಳೆಯುತ್ತಾ ಕೈಯಲ್ಲಿನ ದುಡ್ಡು ಮುಗಿಯುವ ವೇಳೆಗೆ ಪೊಲೀಸರಿಗೆ ಸಿಕ್ಕಿಬಿದ್ದರು. ಅವರಿಬ್ಬರೂ ಮತ್ತೆ ಮುಖ್ಯವಾಹಿನಿಗೆ ಬಂದು ಬದುಕು ರೂಪಿಸಿಕೊಳ್ಳಲು ಕಾನೂನಿನ ಪ್ರಕ್ರಿಯೆ ಮುಗಿಯಲೇ ಬೇಕು.

ಕಳೆದುಹೋಗುವ ಸಮಯ ಮತ್ತು ಹರೆಯ ಎನ್ನುವುದು ಪ್ರೀತಿಯ ಹಾಗಲ್ಲವಲ್ಲ ಪದೇ ಪದೇ ಮರಳಿ ಬರಲು ಯುಗಾದಿಯಂತೆ.

ಬೋರಲು ಬಿದ್ದು ಆಳುವ ಹುಡುಗಿ ನೋವಿನಿಂದ ಝರ್ಝರಿತ ಹುಡುಗನನ್ನು ನೋಡುವಾಗ ಯೋಚಿಸಿತ್ತೇನೆ ನಮ್ಮ ಹೆಸರು ಹೇಳಿ ಯಾರೇ ಆತ್ಮಹತ್ಯೆ ಮಾಡಿಕೊಂಡರೂ ನಾವು ಖಚಿತವಾಗಿ ತಪ್ಪಿತಸ್ಥರು ಎಂದಾಗುವುದಿಲ್ಲ ಎನ್ನುವ ವಿಷಯ ಅವನಿಗೆ ತಿಳಿದಿದ್ದರೆ, ಹಾರ್ಮೋನುಗಳ ತಾಕಲಾಟದಿಂದಾಗುವ ಪ್ರೀತಿಗೂ ಮೀರಿದ್ದಾಗಿದೆ ಈ ಸುಂದರ ಬದುಕು ಎನ್ನುವ ಸತ್ಯ ಅವಳಿಗೆ ತಿಳಿದಿದ್ದರೆ, ಇವರಿಬ್ಬರೂ ಈಗ ಗೆಳೆಯರ ಗುಂಪಿನಲ್ಲಿ ಲಘು ಹರಟೆ ಹೊಡೆಯುತ್ತಾ ವಿನಾಕಾರಣ ನಗುತ್ತಾ ಹಗುರಾಗುತ್ತಿದ್ದರೇನೋ.

ಆದರೆ ಹೀಗಿರುವುದು ಇವರಿಬ್ಬರೇ ಅಲ್ಲವಲ್ಲ ಇನ್ನೂ ನೂರುನೂರು ಮಕ್ಕಳಿಗೆ ಅವರ ಬದುಕಿನ ಬಗ್ಗೆ ತಿಳಿಸಿಕೊಡುವ ಹೊಣೆ ನಮ್ಮ  ಮೇಲಿದೆ.

ಆ ಅಜ್ಜಿಗೋ ಸ್ವಾರ್ಥವೇ ಕಾಣುವಷ್ಟು ಮಾತ್ರ ಜಗದಾನುಭವ. ಹಿತ ಗೊತ್ತಿಲ್ಲಾ ಸುಖ ಕಂಡಿಲ್ಲ. ಮನೆಯವರು ಆಕೆ ಹಿರಿಯಳು ಎನ್ನುವುದನ್ನೇ ಅಸ್ತ್ರಮಾಡಿಕೊಂಡು ಎಂದಿದ್ದರೂ ಸಾಯಲಿರುವ ಅವಳದ್ದೇ ನೆಪ ಮಾಡಿಕೊಂಡು ಮೊಮ್ಮಗಳಿಗೆ,  40 ವರ್ಷ ವಯಸ್ಸಿನ ಅನುಭವೀ ವರನೊಂದಿಗೆ ಲಗ್ನ ಮಾಡಿದ್ದಾರೆ. ಆ ಬಾಲಕಿಗೋ ಓದುವ ಬಯಕೆ.

ಗಂಡನಾಗಿದ್ದ ಗಂಡಸು ಅವನ ತಂದೆ  ತಾಯಿ ಎಲ್ಲರೂ ಜೈಲಿನ ಹವೆ  ಉಂಡು ಈಗ ಜಾಮೀನಿನ ಮೇಲೆ ಹೊರ ಬಂದು, ನಿಮ್ಮ ಹುಡುಗಿಯಿಂದಲೇ ನಮಗೆ ಕೆಟ್ಟ ದಿನಗಳು ಬಂದಿದ್ದು ಎಂದು ದೂಷಿಸುತ್ತಾ ದೂರಾಗಿದ್ದಾರೆ.

ನಮ್ಮ ಮಗಳ ಬಾಳು ಹಾಳಾಗಿ ಹೋಯಿತು ಅವಳಿಗೆ ಇನ್ನ್ಯಾರು ದಿಕ್ಕು ಎಂದು ಕಂಗೆಟ್ಟಿದ್ದಾರೆ ಇವರು.

ಶಿಕ್ಷಣ ಮಕ್ಕಳ ಮೂಲಭೂತ ಹಕ್ಕು , ಬಾಲ್ಯವಿವಾಹ  ಮಾಡುವುದು ಕ್ರಿಮಿನಲ್ ಅಪರಾಧ ಮಾತ್ರವಲ್ಲ ಮಕ್ಕಳನ್ನು ಇನ್ನೆಂದೂ ಬೆಳಕು ಕಾಣದ ಗಾಳಿಯಿಲ್ಲದ ಕತ್ತಲ  ಕೂಪಕ್ಕೆ ತಳ್ಳಿದಂತೆ ಎಂದು ಇವರುಗಳಿಗೆ ಗೊತ್ತಿದ್ದರೆ ಇವತ್ತು ಅದೆಷ್ಟು ಜೀವಗಳು ನೆಮ್ಮದಿಯಲ್ಲಿ ಅರಳಬಹುದಿತ್ತು.

ನಿಟ್ಟುಸಿರು ಬಿಡುತ್ತಿರುವಾಗಲೇ, ಸರ್ಕಲ್ ನಲ್ಲಿ ಭಿಕ್ಷೆ ಬೇಡುತ್ತಿರುವ ಹುಡುಗಿ ಅವಳ ಸೊಂಟದಲ್ಲೊಂದು ತೂಕಡಿಸುತ್ತಿರುವ ಮಗು ಕಾಣುತ್ತದೆ. ಅರಿಶಿನ ಕುಂಕುಮಕ್ಕೆ ಎಂದು ಕರೆದವರ ಮನೆಯಲ್ಲಿ ಪಾತ್ರ ತೊಳೆಯುತ್ತಿರುವ ಕೃಶಾಂಗಿ ಹುಡುಗಿ ಮತ್ತವಳ ಮೈ ಭರ್ತಿ ಹಸಿಹಸಿ ಗಾಯದ ಕಲೆಗಳು ಕಣ್ಣಿಗೆ ಬೀಳುತ್ತವೆ. ಗ್ಯಾರೇಜು ಹುಡುಗನ ಹರುಕಲು ಬನಿಯನ್ ಒಳಗಿನಿಂದ ಗ್ರೀಸಿನ ಕರೆ ಮಾತ್ರವಲ್ಲ ಮುರಿದುಹೋದ ಆತ್ಮದ ತುಣುಕೊಂದು ಇಣುಕುತ್ತೆ.

ಈ ನೋಟಗಳ ಪರದೆ ಸರಿಸಿ ಆಫೀಸ್ನ ಬಾಗಿಲು ತೆರೆಯುತ್ತಿದ್ದಂತೆ ಆ ದೇಶ ಈ ದೇಶಗಳಿಂದ ಕಾಮ ಪಿಪಾಸುಗಳ ಕ್ರೌರ್ಯಕ್ಕೆ ಒಳಗಾಗಲು ಸಾಗಾಣಿಕೆ ಆದ ಮಕ್ಕಳ ಕೈ ಹಿಡಿದು ಒಳಗೆ ಬರುತ್ತಾರೆ ಮಕ್ಕಳ ಸಹಾಯವಾಣಿ ರಕ್ಷಕ ಸಿಬ್ಬಂದಿಗಳು.

ಹೌದು ಮಕ್ಕಳ ಹಕ್ಕುಗಳು ಎನ್ನುವುದು ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಪರಿಕಲ್ಪನೆ. ಅದನ್ನೇ ಆಧರಿಸಿ ಸಂವಿಧಾನದಡಿಯಲ್ಲಿ ನಮ್ಮ ದೇಶದಲ್ಲೂ ಹತ್ತಾರು ಕಾನೂನುಗಳು ರಚನೆಯಾಗಿವೆ. ಆದರೂ ಮಕ್ಕಳೆಡೆಗಿನ ದೌರ್ಜನ್ಯ ಅವ್ಯಾಹತವಾಗಿ ನಡೆಯುತ್ತಿದೆ.

ಮಕ್ಕಳ ರಕ್ಷಣೆ ಪಾಲನೆಯ ವಿಷಯದಲ್ಲಿ ಪಾಲುದಾರರಾದ ನಾವುಗಳು ಎಲ್ಲಿ ಸೋಲುತ್ತಿದ್ದೇವೆ , ಮಕ್ಕಳನ್ನು ಹಿಂಸಿಸುವ ಮನುಷ್ಯನ ಮೂಲ ಯಾವುದು ಎಲ್ಲವೂ ಸಿಕ್ಕರೂ ಎಲ್ಲಕ್ಕೂ ಸಿಕ್ಕಿ ಹಾಕಿಕೊಳ್ಳುವ, ನರಳುವ ಮಕ್ಕಳಿಗೆ ಬೇಕಾದ್ದಾದರೂ ಏನು ಎನ್ನುವ ಗೊಂದಲಕ್ಕೆ ಒಂದಷ್ಟರಮಟ್ಟಿಗೆ ಉತ್ತರವಾಗಿ ನಿಲ್ಲುತ್ತದೆ ಈ ಬಾರಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದವರು ಮಕ್ಕಳನ್ನೇ ಕೇಳಿ ಮಕ್ಕಳನ್ನು ಕಂಡು  ಮಕ್ಕಳೊಡನೆ ಒಡನಾಡಿ ತಯಾರು ಮಾಡಿ ನೀಡಿರುವ ಮಾರ್ಗದರ್ಶಿ ಮಕ್ಕಳ ಹಕ್ಕುಗಳ ಪ್ರಣಾಳಿಕೆ.

೨೦೧೯ರಲ್ಲಿ ಲೋಕಸಭೆ ಮತ್ತೊಮ್ಮೆ ಹೊಸದಾಗಿ ಚುನಾಯಿತರಾದ ಸದಸ್ಯರುಗಳಿಂದ ತುಂಬಲಿದೆ. ಪ್ರತಿ ಚುನಾವಣೆಯಲ್ಲೂ ಮತದಾರನ ವಾಂಛೆಗೆ ತಕ್ಕಂತೆ ಭರವಸೆ ನೀಡುತ್ತಾನೆ ರಾಜಕಾರಣಿ. ಇತ್ತೀಚಿನ ಕೆಲವು ವರ್ಷಗಳವರೆಗೂ ಆ ಭರವಸೆಗಳಲ್ಲಿ, ಅವರುಗಳ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ಸ್ಥಾನವಿರಲಿಲ್ಲ. ಮಕ್ಕಳಂತೂ ಅಸ್ಪೃಶ್ಯರೇ ಆಗಿದ್ದರು.

ಆದರೆ ಈಗ ಹಾಗಲ್ಲ 'ಮಕ್ಕಳ ಅಭಿವೃದ್ಧಿ' ಎನ್ನುವ ಜೋಡಿ ಪದಗಳಿಗೆ ಆಸ್ಪದ ಕೊಡುವಷ್ಟು ರಾಜಕೀಯ ಬದಲಾವಣೆಯಾಗಿದೆ. ಈ ಸಂದರ್ಭದಲ್ಲಿ ಮತದಾರ ಎಚ್ಚರಿಕೆಯಿಂದ ಪ್ರಣಾಳಿಕೆಯನ್ನು ನೋಡಿಯೇ ಮತವನ್ನು ಹಾಕಬೇಕಿರುತ್ತದೆ.

ಅಷ್ಟು ಮಾತ್ರ ಮಾಡಿ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಕೈಕಟ್ಟುವ ಸಮಯವೂ ಇದಲ್ಲ. ಬಜೆಟ್ ಮಂಡಣೆ ಮಾಡುವ ಮೊದಲೇ ಚುನಾವಣೆಗೂ ಮೊದಲೇ ನೀಡಿರುವ ಎಲ್ಲಾ ಭರವಸೆಗಳಿಗೂ ಕಾರ್ಯ ಯೋಜನೆ ಸಿದ್ಧವಿರುವಂತೆ ನಾವು ಮತ ಹಾಕಿ ಗೆಲ್ಲಿಸಿರುವ ಅಭ್ಯರ್ಥಿ ನೋಡಿ  ಕೊಳ್ಳಬೇಕಿರುತ್ತದೆ. ಅದಕ್ಕಾಗಿ ಹಣಕಾಸು ಒದಗಿಸುವ ಚೌಕಟ್ಟು ಹಾಕಿಕೊಂಡು ಅದನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಿ ಹಕ್ಕಿನ ಅನುಕೂಲಗಳು ಕೊನೆಯ  ಮಗುವಿಗೆ ತಲುಪುವವರೆಗೂ ನೋಡಿಕೊಳ್ಳುವುದು ನಮ್ಮಿಂದ ಚುನಾಯಿನಾದ ಅಭ್ಯರ್ಥಿಯ ಕಾನೂನಾತ್ಮಕ ಜವಾಬ್ದಾರಿಯಾಗಿರುತ್ತದೆ.

ಕುಡಿಯುವ ನೀರು ರಸ್ತೆ  ದೀಪಗಳು ಸುರಕ್ಷಿತ ಬೀದಿಗಳು ಇವುಗಳು ನಮ್ಮ ನಿಮ್ಮ ಹಕ್ಕು ಮಾತ್ರವಲ್ಲ ಮಕ್ಕಳ ಹಕ್ಕುಗಳೂ ಹೌದು.

ಇವೆಲ್ಲಾ ದಾಖಲುಗೊಂಡ ಹಕ್ಕುಗಳ ಜೊತೆಗೆ ಮಕ್ಕಳು ಈ ಬಾರಿ ಕೇಳುತ್ತಿದ್ದಾರೆ ನಮ್ಮ ವಯಸ್ಸಿನ ತಕ್ಕಂತಹ ವೃತ್ತಿ  ತರಬೇತಿ ಪಡೆದುಕೊಳ್ಳುವುದನ್ನೂ ನಮ್ಮ ಹಕ್ಕು ಎಂದೇ ಪರಿಗಣಿಸಿ ಅವಕಾಶ ಮಾಡಿಕೊಡಿ ಎಂದು.

ಇಷ್ಟು ಮಾತ್ರವಲ್ಲ ಮನೋರಂಜನಾ ವಲಯಗಳಲ್ಲಿ ಮಕ್ಕಳನ್ನು ದೊಡ್ಡವರ ಮನೋರಂಜನೆಗೆ ಕಾರ್ಮಿಕರಂತೆ ದುಡಿಸಿಕೊಳ್ಳುವುದನ್ನು ಅಪರಾಧ ಎಂದು ಪರಿಗಣಿಸಿ ಎಂದು ಕೇಳುತ್ತಿದ್ದಾರೆ.

ಹಿರಿಯರೇ ಇಲ್ಲಿ ಕೇಳಿ,  ಮಕ್ಕಳಿಗೆ ಅವರ ಬದುಕನ್ನು  ಅವರಿಗೆ ಒದಗಿಸುವ ಅವಕಾಶ ಕಲ್ಪಿಸಿಕೊಡುವುದು ಎಂದರೆ ನಾವು ಮಾಡುತ್ತಿರುವ ಸಮಾಜ ಸೇವೆ ಅಲ್ಲ . ಅದು ಅವರದ್ದು ಅವರಿಗೆ ಸಿಗಬೇಕು ನಾವು ಕೊಡಬೇಕು ಅಷ್ಟೇ. ಇಷ್ಟನ್ನು ಅರಿತುಕೊಂಡು ಜಾರಿಗೆ ತರಲು ಸಮರ್ಥನಿರುವ ಅಭ್ಯರ್ಥಿಗೆ ಮಾತ್ರ ನಮ್ಮ ಮತ ಹಾಕೋಣ . ಮಕ್ಕಳು ಸಂರಕ್ಷಣೆಗೊಂಡರೆ ನಮ್ಮ ಭವಿಷ್ಯವೇ ನೆಮ್ಮದಿಯಿಂದ ಗಟ್ಟಿಗೊಳ್ಳುವುದು ಎನ್ನುವ ಸ್ವಾರ್ಥವನ್ನು ಮರೆಯದಿರೋಣ.

---------

Comments

Popular posts from this blog

ಬಸ್ ಮತ್ತು ಅಕ್ಕಿ ಮಹಿಳೆಯರಿಗೆ - Free for Women

ಚೈತ್ರ ಕುಂದಾಪುರ ಕಲಿಸಿದ ಪಾಠ - ಆಂದೋಲನ

DD ಚಂದನ - ಮಹಿಳೆಯರಿಗೆ ಸರ್ಕಾರಿ ಹಾಸ್ಟೆಲ್