ಇವತ್ತಿನ ಆಂದೋಲನ ಪತ್ರಿಕೆಯಲ್ಲಿ...ಓದಿ ಅಭಿಪ್ರಾಯ ತಿಳಿಸಿ 🙏 ’ಊಟಾ ಊಟಾ’ ಎಂದು ಹಪಹಪಿಸುತ್ತಿದ್ದವಳನ್ನು ಚಾಲಕ ಪವನ್ “ಏನ್ಮೇಡಂ ನಿಮ್ಮಂಥವರು ಜ್ಞಾನದ ಭೂಕ್ (ಹಸಿವು) ಅನ್ನಬೇಕು ಅದು ಬಿಟ್ಟು ಹೀಗೆ ಊಟಾ ಊಟಾ ಅನ್ನುತ್ತಿದ್ದಿರಲ್ಲ” ಎಂದು ರೇಗಿಸುತ್ತಾ ಗಾಡಿಯನ್ನು ರೋಂಯ್ ಅಂತ ನಿಲ್ಲಿಸಿ, ಇಳಿಯಲು ಹೇಳಿದ. ಪಕ್ಕದ ಕಾಂಪೌಂಡಿನ ದೊಡ್ಡ ಕಮಾನಿನ ಮೇಲೆ ಬರೆದಿತ್ತು ’ಮಹರ್ಷಿ ಸಾಂದಿಪನಿ ಆಶ್ರಮ್”. ಕೃಷ್ಣ, ಬಲರಾಮ, ಸುಧಾಮ ಓದಿದ ಗುರುಕುಲ. ನಾನೋದಿದ ಮೈಸೂರಿನ ಶಾಲೆ ಅವಿಲಾ ಕಾನ್ವೆಂಟಿನ ಮುಖ್ಯ ಗೇಟಿನ ಕಮಾನೂ ಹೀಗೇ ಇತ್ತು. ಎಲ್ಲಾ ಶಿಕ್ಷಕರೂ ನಿಸ್ಪೃಹವಾಗಿ ನನ್ನನ್ನೂ ಕೃಷ್ಣನ ಅರ್ಧದಷ್ಟಾದರೂ ಜಾಣೆ ಮಾಡಬೇಕೆನ್ನುವ ಪ್ರಯತ್ನ ನಡೆಸಿ ಸೋತಿದ್ದನ್ನು ನೆನೆಸಿಕೊಂಡೇ ಒಳಹೊಕ್ಕೆ. ಉಜ್ಜನಿಯ ಸಾಂದಿಪನಿ ಆಶ್ರಮದಲ್ಲಿ ಆ ದಿನ ಹೆಚ್ಚಿನ ಜನರಿರಲಿಲ್ಲ. ಕುಟಿರಾಕಾರದ ಸಿಮೆಂಟಿನ ಅಂಗಳದೊಳಗಿನ ಗೋಡೇಗಳ ಮೇಲೆಲ್ಲಾ ಕೃಷ್ಣ ಕಲಿತ ಹದಿನಾಲ್ಕು ವಿದ್ಯೆಗಳನ್ನು ಬಣ್ಣಬಣ್ಣದಲ್ಲಿ ರಚಿಸಿದ್ದಾರೆ. ಗಾಢ ಬಣ್ಣಗಳು ಈಗಿನ ಆಧುನಿಕ ಶಾಲೆಗಳನ್ನು ಹೋಲುತ್ತಿದ್ದರೂ ಕೃಷ್ಣಭಾವ ಕೊಡುವುದರಲ್ಲಿ ಸೋಲುವುದಿಲ್ಲ. ಆ ಕೋಣೆಯ ದೊಡ್ಡ ಆಕರ್ಷಣೆ ಎಂದರೆ ಗಿರಿಧಾರಿ ಕಲಿತನೆನ್ನಲಾದ ಹದಿನಾಲ್ಕು ವಿದ್ಯೆಗಳು ಯಾವುವು ಎನ್ನುವ ಪಟ್ಟಿಯೊಂದನ್ನು ಬಾಗಿಲಿನ ಹಿಂದಿನ ಗೋಡೆಯ ಮೇಲೆ ತೂಗು ಹಾಕಿರುವುದು. ನಾಲ್ಕು ವೇದಗಳು, ಕಲ್ಪಗಳು, ತಂತ್ರಜ್ಞತೆ, ವ್ಯಾಕರಣ, ಪುರಾಣ, ಜ್ಯೋತ...